ಕಡಬ ಟೈಮ್ಸ್, ಬೆಳ್ತಂಗಡಿ : ಕಾಡುಹಂದಿಯನ್ನು ಯಾವುದೋ ಆಯುಧಗಳಿಂದ ದಾಳಿ ಮಾಡಿ ಕೊಂದ ಪ್ರಕರಣ ಸಂಬಂಧ ವೈದ್ಯರ ವರದಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ವಿನ ತೋಟದಲ್ಲಿ ಒಂದು ವರ್ಷ ಪ್ರಾಯದ ( 26 ಕೆ.ಜಿ ತೂಕದ) ಹೆಣ್ಣು ಕಾಡುಹಂದಿಯನ್ನು ಜ.23 ರಂದು ಜಾನು ಗೌಡ ಎಂಬಾತ ಆಯುಧದಿಂದ ದಾಳಿ ಮಾಡಿ ಸಾಯಿಸಿದ್ದ ಎನ್ನಲಾಗಿದೆ . ಈ ಘಟನೆ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು.


ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಜ.23 ರಂದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಬೆಳ್ತಂಗಡಿ ಗೋ ಮತ್ತು ಪಶು ಇಲಾಖೆಯ ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ಯಾವ ವಸ್ತುವಿನಿಂದ ಗಾಯಗೊಳಿಸಿ ಸಾಯಿಸಲಾಗಿದೆ ಎಂದು ವರದಿ ಕೇಳಿದ್ದರು.
ಈ ಬಗ್ಗೆ ಪಶು ವೈದ್ಯರು ಜ.26 ರಂದು ಅಯುಧದಿಂದ ಗಾಯಗೊಳಿಸಿ ಸಾಯಿಸಿರುವುದಾಗಿ ವರದಿ ನೀಡಿದ್ದು ಅದರಂತೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಆರೋಪಿ ವಿರುದ್ದ ಜ.27 ರಂದು ಅರಣ್ಯ ಕಾಯ್ದೆ 9,39,51 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

