ಕಡಬ ಟೈಮ್, ಆಲಂಕಾರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಬಿಜೆಪಿಯ ಎರಡು ಬಣಗಳ ನಡುವಿನ ಸ್ಪರ್ಧೆಯಿಂದ ಕುತೂಹಲದ ಕೇಂದ್ರಬಿಂದುವಾಗಿತ್ತು.ಅಲ್ಲದೆ ಚುನಾವಣೆ ನಡೆಯುತ್ತಿದ್ದ ವೇಳೆ ಇತ್ತಂಡಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.


ಇದೀಗ ನ್ಯಾಯಾಲಯದ ಆದೇಶದ ಅರ್ಹ ಮತದಾರರ ಮತದಾನದ ಹೊರತಾಗಿ ರಮೇಶ್ ಭಟ್ ಉಪ್ಪಂಗಳ ನೇತೃತ್ವದ ಸಹಕಾರಿ ಬಳಗ ಜಯಭೇರಿ ಭಾರಿಸಿದ್ದು ಹನ್ನೆರಡು ಸ್ಥಾನಗಳ ಪೈಕಿ ಹತ್ತರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೇವಲ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿ ತೀವ್ರ ಮುಖಭಂಗ ಅನುಭವಿಸಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಸದ್ಯ ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ ನೀಡಲಾಗಿದೆ.


ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ರಮೇಶ್ ಭಟ್ ಉಪ್ಪಂಗಳ ಬಳಗ ಮೇಲುಗೈ ಸಾಧಿಸಿದರೂ ಸಂಘದ ಸದಸ್ಯರೊಬ್ಬರು ನ್ಯಾಯಾಲಯದಿಂದ ಸುಮಾರು 440 ಅನರ್ಹ ಮತದಾರರಿಗೆ ಮತದಾನಕ್ಕೆ ಅರ್ಹತೆ ಪಡೆದು ಬಂದು ಮತದಾನಕ್ಕೆ ಅವಕಾಶ ದೊರೆತಿರುವುದುರಿಂದ ಸಹಕಾರ ಭಾರತಿ ಅಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ನ್ಯಾಯಾಲಯದಲ್ಲಿ ಗೆಲುವು ಸಾಧಿಸುವ ಇಂಗಿತ ವ್ಯಕ್ತಪಡಿಸಿದೆ. ಸಂಘದಿಂದ ಅರ್ಹ ಮತದಾರರಿಗೆ ನಡೆದ ಮತದಾನ ಹಾಗೂ ನ್ಯಾಯಲಯದಿಂದ ಅರ್ಹತೆ ಪಡೆದು ನಡೆದ ಮತದಾನದ ಒಟ್ಟು ಮತಗಳ ಕ್ರೂಢೀಕರಣವಾದರೆ ಸಹಕಾರ ಭಾರತಿ ಮೇಲುಗೈ ಸಾಧಿಸಲಿದೆ ಎನ್ನುವ ಲೆಕ್ಕಚಾರ ನಡೆಯುತ್ತಿದೆ.
ಅಧಿಕಾರದ ಗದ್ದುಗೆಯಲ್ಲಿ : ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದಿಂದ ಸಾಮಾನ್ಯ ಕ್ಷೇತ್ರದಿಂದ ರಮೇಶ್ ಭಟ್ ಉಪ್ಪಂಗಳ, ಪದ್ಮಪ್ಪ ಗೌಡ ಕೆ., ದಯಾನಂದ ರೈ ಮನವಳಿಕೆ, ಕೇಶವ ಗೌಡ ಆಲಡ್ಕ, ಉದಯ ಎಸ್ ಸಾಲ್ಯಾನ್. ಸಾಲಗಾರ ಮಹಿಳಾ ಮೀಸಲು ಕ್ಷೇತ್ರದಿಂದ ರತ್ನಾ ಬಿ.ಕೆ., ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ವಿಜಯ ಎಸ್., ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಪದ್ಮಪ್ಪ ಗೌಡ ಕೆ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕುಂಞ ಮುಗೇರ, ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಅಶೋಕ, ಸಾಲಗಾರರಲ್ಲದ ಕ್ಷೇತ್ರದಿಂದ ಲೋಕೇಶ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿಯಿಂದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಅಶೋಕ ಗೋಕುಲನಗರ, ಸಾಲಗಾರ ಮಹಿಳಾ ಮಹಿಳಾ ಮೀಸಲು ಕ್ಷೇತ್ರದಿಂದ ಗಾಯತ್ರಿ ಆಯ್ಕೆಯಾಗಿದ್ದಾರೆ. ಆದರೆ ಫಲಿತಾಂಶಕ್ಕೆ ತಡೆ ನೀಡಲಾಗಿದೆ.


ಈ ಸಂದರ್ಭದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ರಮೇಶ್ ಭಟ್ ಉಪ್ಪಂಗಳ ಅವರು , ಇದು ಸಹಕಾರಿಗಳ ಗೆಲುವು ಇದರಲ್ಲಿ ಯಾವುದೇ ರಾಜಕೀಯವನ್ನು ಯಾರು ತರಬಾರದು, ಈ ಗೆಲವು ಸಹಕಾರಿ ಚಳವಳಿಯ ಒಂದು ಭಾಗ , ಎಲ್ಲರೂ ಪಕ್ಷ ಭೇದ ಮರೆತು ಸಹಕಾರ ಕೊಟ್ಟಿದ್ದಾರೆ ಎಂದರು.


ಸೋಲಿನ ನಡುವೆಯೂ ಜೈಕಾರ: ಚುನಾವಣೆಯ ಲೆಕ್ಕಾಚಾರ ನಡೆದು ಉಪ್ಪಂಗಳ ನೇತೃತ್ವದ ಸಹಕಾರಿ ಬಳಗ ಜಯಭೇರಿ ಭಾರಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ರಸ್ತೆಯಂಚಿನಲ್ಲಿ ಒಟ್ಟು ಸೇರಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆಯವರು ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸೋಲಿನ ನಡುವೆಯೂ ಪಕ್ಷದ ರಾಜ್ಯಾಧ್ಯಕ್ಷರಿಗೆ, ಶಾಸಕರಿಗೆ ಹೆಸರು ಸೂಚಿ ಘೋಷಣೆ ಕೂಗಿದರು. ಸಹಕಾರಿ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ದಿ ಅಧಿಕಾರಿ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು