ಕಡಬ ಟೈಮ್, ಪಟ್ಟಣ ಸುದ್ದಿ :ಮುಂಜಾಗೃತಾ ಕ್ರಮ ವಹಿಸದೆ ಟಿಪ್ಪರ್ ಗಳು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಹಾಗೂ ಶರವೇಗದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಡಿಜಿಟಲ್ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ನಂತರ ಬೆಳವಣಿಗೆಯಲ್ಲಿ ಟಿಪ್ಪರ್ ಮಾಲನೊಬ್ಬ ವೆಬ್ ನಿರ್ವಾಕರೊಬ್ಬರ ಕುರಿತು ಟಿಪ್ಪರಿನ ಅಡಿಗೆ ಯಾರಾದರೂ ಹಾಕಿ ,ಇಲ್ಲವೆಂದರೆ ನಾನೇ ಟಿಪ್ಪರ್ ನ ಅಡಿಗೆ ಹಾಕುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರು.


ಬೆದರಿಕೆ ಹಾಕಿದ ಆಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ನ್ಯೂಸ್ ಅಪ್ಡೇಟ್ ವೆಬ್ ನಿರ್ವಾಹಕ ಗಣೇಶ್ ಇಡಾಳ ಎಂಬವರು ಬೆದರಿಕೆ ಹಾಕಿದ ಟಿಪ್ಪರ್ ಚಾಲಕನ ವಿರುದ್ದ ಕಡಬ ಠಾಣೆಗೆ ಆಡಿಯೋ ಸಹಿತ ದೂರು ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಫೆ.22 ರಂದು ಅರ್ಥ್ ಮೂವರ್ಸ್ ಅಸೋಶಿಯೇಶನ್ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದೆ.


ಅಸೋಶಿಯೇಶನ್ ಅಧ್ಯಕ್ಷ ಮನಮೋಹನ ರೈ ಮಾತನಾಡಿ, ಪತ್ರಕರ್ತನನ್ನು ಟಿಪ್ಪರಿನ ಅಡಿಗೆ ಹಾಕಿ ಸಾಯಿಸಬೇಕೆಂದು ಸಂಘಟನೆಯ ನಾವೆಲ್ಲ ಸೇರಿ ಸೂಚಿಸಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಇದು ಸತ್ಯಕ್ಕೆ ದೂರದ ವಿಚಾರವಾಗಿದೆ. ಆದರೆ ಯಾರೋ ಒಬ್ಬ ನಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾಧರ್ಮಕ್ಕೆ ವಿರುದ್ಧವಾದ ಪದ ಬಳಕೆ ಮಾಡಿ ಮಣ್ಣು ತೆಗೆಯುವವರನ್ನು ಮಣ್ಣಿನ ಅಡಿಗೆ ಹಾಕಬೇಕು ಎಂದು ಹೇಳಿದ್ದಾರೆ, ಇಂತಹ ಅಗೌರವಯುತ ಪದಗಳನ್ನು ಬರೆದು ಹಾಕಿದಾಗ ಯಾರೋ ಟಿಪ್ಪರ್ ಮಾಲಕರೊಬ್ಬರು ನೋವಿನಿಂದ ಇವನನ್ನು ಟಿಪ್ಪರಿನ ಅಡಿಗೆ ಹಾಕಬೇಕೆಂದು ಹೇಳಿರುತ್ತಾರೆ. ಇದನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಆಕ್ಷೇಪಾರ್ಹ ಪದಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಟಿಪ್ಪರಿನಲ್ಲಿ ಮಣ್ಣನ್ನು ಸಾಗಿಸುವಾಗ ಟರ್ಪಾಲು ಹಾಕಿ ಸಾಗಿಸುವುದು, ಡೋರ್ ಅಳವಡಿಸಿ ಸುರಕ್ಷತೆಯನ್ನು ಕಾಪಾಡುವುದು ಹೀಗೆ ಕಾನೂನು ರೀತಿಯಲ್ಲಿ ನಮ್ಮ ಕೆಲಸಗಳನ್ನು ಮಡಲು ನಾವು ಬದ್ದರಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಮಾನ ಹಾನಿ ಹೇಳಿಕೆಯನ್ನು ನೀಡಿ ಅಗೌರಯುತ ಪದಗಳನ್ನು ಬಳಸಲಾಗಿದೆ, ಇದು ಖಂಡನೀಯ. ನಮ್ಮ ಉಧ್ಯಮವು ತುಂಬಾ ನಷ್ಟದಿಂದ ನಡೆಯುತ್ತಿದ್ದು ಈ ರೀತಿಯ ಹೇಳಿಕೆಯಿಂದ ನಮ್ಮನ್ನು ಖಳನಟರಂತೆ ಬಿಂಬಿಸುವುದು ಸರಿಯಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಅಸೋಷಿಯೇಷನ್ ಕಾರ್ಯದರ್ಶಿ ಸುರೇಶ್, ಖಜಾಂಜಿ ಕೆ.ಎಮ್.ಹಾರೀಶ್, ವಲಯಾಧ್ಯಕ್ಷ ಆನಿಷ್ ತೋಮ್ಸನ್, ಸದಸ್ಯರಾದ ಹರಿಕೃಷ್ಣ, ಸದಾನಂದ .ಪಿ. ಮತ್ತಿತರರು ಉಪಸ್ಥಿತರಿದ್ದರು.