ಕಡಬ ಟೈಮ್ಸ್, ಉಪ್ಪಿನಂಗಡಿ: ಮಖೆ ಜಾತ್ರೆ ಸಡಗರದಲ್ಲಿದ್ದ ಜನರು ಯುವಕನೋರ್ವ ನದಿಗೆ ಹಾರಿದ ಎಂಬ ಸುದ್ದಿ ತಿಳಿದು ಆತಂಕಕ್ಕೆ ಒಳಗಾದ ವಿದ್ಯಮಾನ ರಾತ್ರಿ ನಡೆದಿದ್ದು ಆತ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಆರೋಪಿ ಎಂಬ ಮಾಹಿತಿ ಲಭ್ಯವಾಗಿದೆ.


ಜಾತ್ರೆಯಲ್ಲಿ ಬಂದೋಬಸ್ತು ನಿರತ ಪೊಲೀಸಕ ಕಣ್ಣಿಗೆ ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವ ಕಂಡುಬಂದಿದ್ದ. ಕೂಡಲೇ ಪೊಲೀಸರು ಆತನನ್ನು ಹಿಂಬಾಲಿಸುತ್ತಾರೆ. ಇದನ್ನು ಅರಿತ ಆತ ಕ್ಷಣಾರ್ಧದಲ್ಲಿ ಪರಾರಿಯಾಗಲು ಯತ್ನಿಸುತ್ತಾನೆ. ದೇಗುಲದ ರಥೋತ್ಸವ ನಡೆಯುತ್ತಿದ್ದಂತೆಯೇ ಪೊಲೀಸರು ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದತ್ತ ಧಾವಿಸುತ್ತಿರುವುದು ಕಂಡು ಬಂದಿತ್ತು. ಜತೆಗೆ ಭಕ್ತರು ಕೂಡ ಅತ್ತ ಧಾವಿಸತೊಡಗಿದರು.




ಪೊಲೀಸರು ಬೆನ್ನಟ್ಟಿದಾಗ ಅಣೆಕಟ್ಟಿನ ಹಿನ್ನೀರಿನಿಂದ ತುಂಬಿದ್ದ ನೇತ್ರಾವತಿ ನದಿಗೆ ಧುಮುಕಿದ್ದಾನೆ. ಮಾತ್ರವಲ್ಲದೆ ನದಿಯ ಮಧ್ಯಭಾಗಕ್ಕೆ ಹೋಗಿ ತನ್ನನ್ನು ಹಿಡಿಯುವಂತೆ ಪೊಲೀಸರಿಗೆ ಸವಾಲು ಕೂಡ ಹಾಕಿದ್ದಾನೆ ಎನ್ನಲಾಗಿದೆ.


ಜಾತ್ರೆಯ ಜನ ಜಂಗುಳಿಯಲ್ಲಿ ಅನಪೇಕ್ಷಿತ ಘಟನಾವಳಿಗೆ ಅವಕಾಶವಾಗಬಾರದೆಂಬ ಕಾರಣಕ್ಕೆ ಸ್ಥಳದಲ್ಲಿ ಮೌನಕ್ಕೆ ಜಾರಿದ್ದ ಪೊಲೀಸರು ಆತ ದಡ ಸೇರಬಹುದೆಂಬ ಸಾಧ್ಯತೆಯ ಅಯಕಟ್ಟಿನ ಪ್ರದೇಶದಲ್ಲಿ ನಿಗಾ ಇರಿಸಿದರಾದರೂ ಆತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಕೆಲ ಹೊತ್ತು ಕುತೂಹಲಕ್ಕೆ ಕಾರಣವಾಗಿದ್ದು ಕೂಲಂಕಷವಾಗಿ ಪರಿಶೀಲಿಸಿದಾಗ ನದಿಗೆ ಹಾರಿದಾತನ ಅಸಲಿತನ ಬಯಲಾಗಿದೆ.