ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಾದ ಕಲ್ಲಗಂಡಿ,ಬಾಜಿನಾಡಿ,ಕಲ್ಲಿಮಾರ್, ಮರೆಂಗೋಡಿ, ಬದಿಗುಡ್ಡೆ ಈ ಪ್ರದೇಶಗಳಿಗೆ ಕಡಬ ಪಟ್ಟಣ ಪಂಚಾಯತ್ನ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೂಡಲೇ ಕುಡಿಯುವ ನೀರಿನ ಸರಬರಾಜು ಮಾಡಿಕೊಡಬೇಕೆಂದು ಆ ಭಾಗದ ಸುಮಾರು 35 ಮನೆಯವರು ಆಗ್ರಹಿಸಿದ್ದಾರೆ.


ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಫೆ.11 ರಂದು ಒಂದೆಡೆ ಸೇರಿದ ಅಲ್ಲಿನ ನಿವಾಸಿಗಳು ನೀರು ಸರಬರಾಜು ಸಮಸ್ಯೆಯನ್ನು ಸರಿಪಡಿಸದ ಪಟ್ಟಣ ಪಂಚಾಯತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಂದಾಳು ಅಶೋಕ್ ಕುಮಾರ್ ರೈ ಯವರು, ಕಳೆದ 12 ವರ್ಷಗಳಿಂದ ಈ ಭಾಗದಲ್ಲಿ ನೀರಿನ ಸಂಪರ್ಕವನ್ನೆ ನೀಡಿಲ್ಲ, ಸುಮಾರು 12 ವರ್ಷಗಳ ಹಿಂದೆ ಟ್ಯಾಂಕಿ ನಿರ್ಮಿಸಿ ಕೊಳವೆ ಬಾವಿಯನ್ನು ತೆಗೆಯಲಾಗಿತ್ತು. ಕೊಳವೆಯಲ್ಲಿಯೂ ಉತ್ತಮ ನೀರು ಇತ್ತು, ಅಲ್ಲದೆ ಪೈಪ್ ಲೈನ್ ಮಾಡಿದ್ದಾರೆ. ಆದರೆ ಯಾರಿಗೂ ಸಂಪರ್ಕ ನೀಡಿಲ್ಲ, ಕಳೆದ 15 ದಿನಗಳ ಹಿಂದೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ, ಅಲ್ಲದೆ ಫೆ.10 ರಂದು ಕೊಳವೆ ಬಾವಿಯಲ್ಲಿದ್ದ ಪಂಪ್ನ್ನು ಕೊಡ ಪಟ್ಟಣ ಪಂಚಾಯತ್ನವರು ಕೊಂಡೊಯ್ದಿದ್ದಾರೆ.




ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಪಟ್ಟಣ ಪಂಚಾಯತ್ ಇಂಜಿನಿಯರ್ ಅವರಿಗೆ ಕರೆ ಮಾಡಿದಾಗ ಇಂಜಿನಿಯರ್ ಅವರು ಉಢಾಪೆಯಾಗಿ ಮಾತನಾಡಿದ್ದಾರೆ, ನಾವು ತೆಗೆಯುವುದು ತೆಗೆಯುವುದೇ ಎಂದು ಹೇಳಿದ್ದಾರೆ. ಕಳೆದ 13 ವರ್ಷಗಳ ಹಿಂದೆ ಜಿ.ಪಂ. ಅನುದಾನದಲ್ಲಿ ನಿರ್ಮಿಸಲಾದ ಟ್ಯಾಂಕಿಗೆ ನೀರು ಹೋಗುತ್ತದೆ, ಆದರೆ ಟ್ಯಾಂಕಿನಿಂ ದ ನೀರು ಹಿಂದಕ್ಕೆ ಪೈಪ್ ಮೂಲಕ ಬರುವುದಿಲ್ಲ, ಆ ನೀರು ಅರ್ಧ ಒಂದು ಗಂಟೆಯಲ್ಲಿ ಪುನಃ ಕೊಳವೆ ಬಾವಿಗೆ ಹೋಗಿ ಖಾಲಿಯಗುತ್ತದೆ. ಇಲ್ಲಿರುವ ಎರಡು ಕೊಳವೆ ಬಾವಿಗೆ ಒಂದು ಸಿಂಗಲ್ ಪೇಸ್, ಮತ್ತೊಂದು ತ್ರಿಪೇಸ್ ವಿದ್ಯುತ್ ಸಂಪರ್ಕ ಇದೆ. ಇದೀಗ ಎರಡು ಕೊಳವೆ ಬಾವಿಯ ಮೊಟಾರ್ಗಳನ್ನು ಕೊಂಡೊಯ್ದಿದ್ದಾರೆ. ಇಲ್ಲಿರುವ ವಿದ್ಯುತ್ ಸಂಪರ್ಕವನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ.


ಮೊದಲು ಗ್ರಾ.ಪಂ. ಈಗ ಪಟ್ಟಣ ಪಂಚಾಯತ್ ಇದುವರೆಗೆ ಇಲ್ಲಿ ಯೂರಿಗೂ ನೀರು ಕೊಟ್ಟಿಲ್ಲ. ಟ್ಯಾಂಕಿನಿಂ ದ ನೀರು ಬಾರದೆ ಇರುವುದರಿಂದ ಇಲ್ಲಿ ಯಾರು ಸಂಪರ್ಕ ಪಡೆದಿಲ್ಲ, ಇನ್ನೇರಡು ತಿಂಗಳಿನಲ್ಲಿ ನೀರಿನ ಅಭಾವ ಪ್ರಾರಂಭವಾಗುತ್ತದೆ, ಪಂಚಾಯತ್ ನವರು ಈ ರೀತಿ ಮಾಡಿದರೆ ಜನರು ಏನು ಮಾಡಬೇಕು. ಪಂಚಾಯತ್ ನವರು ಹೇಳುತ್ತಿರುವುದು ನಾವು ಸಂಪರ್ಕ ಪಡೆದಿಲ್ಲ ಅದಕ್ಕಾಗಿ ಪಂಪನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು. ನಮಗೆ ಒಟ್ಟಿನಲ್ಲಿ ನೀರಿನ ಸಂಪರ್ಕ ಬೇಕು, ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇನ್ನು ಒಂದು ವಾರ ಕಾಯುತ್ತೇವೆ, ಮುಂದೆ ಪಂಚಾಯತ್ ಎದುರಿನಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು