ಕಡಬ ಟೈಮ್ (KADABA TIMES):ಪೊಲೀಸ್ ಸಮವಸ್ತ್ರದಲ್ಲೇ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಾಗಲಕೋಟೆ ಎಸ್ಪಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ಬಾದಾಮಿಯ ಬನಶಂಕರಿ ದೇವಸ್ಥಾನದ ಬಳಿ ಘಟನೆ ನಡೆದಿತ್ತು. ಜಾಲತಾಣದಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ಟೀಕೆ ವ್ಯಕ್ತವಾಗಿತ್ತು. ಬಾದಾಮಿಯಿಂದ ವಿವಿಧ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಎಎಸ್ಐ ಜಿಬಿ ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.




ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು, ವರ್ಗಾವಣೆಯಾದ ಸಿಬ್ಬಂದಿ ಸದ್ಯ ವಾಸವಿರುವ ವಸತಿಗೃಹ ಕೂಡ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.


ವಿಡಿಯೋ ವೈರಲ್ ಬಳಿಕ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ, ನನಗೆ ಪೊಲೀಸರು, ರಾಜಕಾರಣಿಗಳು, ನಟರು, ಬಡವರು, ಶ್ರೀಮಂತರು ಎಲ್ಲರೂ ಒಂದೆ ಸಮಾನ. ಎಲ್ಲರೂ ಬಂದು ಆಶೀರ್ವಾದ ಪಡೆಯುತ್ತಾರೆ. ದುಡ್ಡು ಕೊಟ್ಟು ಆಶೀರ್ವಾದ ಮಾಡುವುದು ನಮ್ಮ ಮಠದ ಪರಂಪರೆ. ಪೊಲೀಸರು ಭಕ್ತರಾಗಿ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಅವರಿಗೆ ನಾವು ಲಂಚ ಕೊಟ್ಟಿಲ್ಲ. ನಾವು ದಿವಸದ ದಾಸೋಹಕ್ಕೆ ಎಷ್ಟು ಹಣ ಬೇಕು ಅಷ್ಟು ಇಟ್ಕೊಂಡು. ಉಳಿದ ಹಣವನ್ನು ನಾವು ಭಕ್ತರಿಗೆ ಕೊಡುತ್ತೇವೆ. ಇದು ಭಕ್ತರನ್ನು ಬೆಳೆಸುವ ಮಠವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.