ಕಡಬ ಟೈಮ್ (KADABA TIMES):ನೆಲ್ಯಾಡಿ ಪಟ್ಟಣದ ಮುಖ್ಯ ವಾಣಿಜ್ಯ ಕೇಂದ್ರದಲ್ಲಿರುವ ಸಾರ್ವಜನಿಕ ಶೌಚಾಲಯ ಈಗ ಪೂರ್ತಿಯಾಗಿ ಹಾಳಾಗಿದ್ದು, ಸಾರ್ವ ಜನಿಕರಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಹಾಗೂ ಸರಿಯಾದ ನಿರ್ವಹಣೆ ಕೊರತೆಯಿಂದ ಈ ಶೌಚಾಲಯವು ಬಳಸಲು ಅಯೋಗ್ಯವಾಗಿದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರವೇಶ ದ್ವಾರಗಳು, ಶೌಚಾಲಯದ ಬಾಗಿಲುಗಳು ಮುರಿದು ಹೋಗಿವೆ, ಕಿಟಕಿಗಳು ಇಲ್ಲ, ಗೋಡೆಗಳು ಬಿರುಕು ಬಿಟ್ಟಿವೆ, ಒಳಗೆ ನೀರು ಸರಿಯಾಗಿ ಹರಿಯುತ್ತಿಲ್ಲ, ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ ಹಾಗೂ ಸುತ್ತಮುತ್ತು ದುರ್ವಾಸನೆಯ ಕಾರಣ ಜನರು ಬಳಕೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಾರ್ವಜನಿಕ ಶೌಚಾಲಯವನ್ನು ಹಲವು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಕಾಲಕ್ರಮೇಣ ಈ ದುಸ್ಥಿತಿಗೆ ತಲುಪಿದೆ.




ನೆಲ್ಯಾಡಿಯಲ್ಲಿ ಸುಮಾರು 250ರಿಂದ 300ರಷ್ಟು ವ್ಯಾಪಾರ ಮಳಿಗೆಗಳಿವೆ. ನೆಲ್ಯಾಡಿ, ಕೌಕ್ರಾಡಿ ಗ್ರಾಮಗಳನ್ನು ಬೆಸೆಯುವ ಹಾಗೂ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮಂಗಳೂರಿನ ಮಧ್ಯೆ ಬರುವುದರಿಂದ ಈ ಪ್ರದೇಶದಲ್ಲಿ ಸುಸಜ್ಜಿತವಾದ ಶೌಚಾಲಯ ಅತೀ ಅಗತ್ಯವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತವು ಗಮನಹರಿಸಬೇಕಾಗಿದೆ.


ಈ ಶೌಚಾಲಯ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಊರಿನ ನಾಗರಿಕರು ಸ್ಥಳೀಯ ಆಡಳಿತದ ವಿರುದ್ದ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ಮಹಿಳೆಯರು ಹಾಗೂ ಹಿರಿಯರು ಶೌಚಾಲಯ ಸೌಲಭ್ಯಗಳಿಲ್ಲದೇ ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯವನ್ನು ಸಂಪೂ ರ್ಣವಾಗಿ ನವೀಕರಿಸಿದ ಆಧುನಿಕ ಸೌಲಭ್ಯ ಗಳೊಂದಿಗೆ ಸಾರ್ವಜನಿಕರಿಗೆ ಒದಗಿಸಬೇಕು ಎಂದು ಜನಸಾಮಾನ್ಯರ ಆಗ್ರಹವಾಗಿದೆ.