ಕಡಬ ಟೈಮ್, ಸುಳ್ಯ: ಸುಳ್ಯದ ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ಹಿಡಿದು, ವಿಚಾರಿಸಿ ಇದೀಗ ಪೋಲೀಸರಿಗೊಪ್ಪಿಸಿರುವ ಘಟನೆ ವರದಿಯಾಗಿದೆ.


ಕನಕಮಜಲು ಗ್ರಾಮದ ನರಿಯೂರು ಸೀತಾರಾಮ ಗೌಡರ ಕಟ್ಟಡದಲ್ಲಿರುವ ಧನಂಜಯ ಎಂಬವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಜೋರು ಶಬ್ದ ಕೇಳಿದ್ದು ಅಂಗಡಿ ಬಳಿ ಬಂದು ನೋಡಿದಾಗ, ಎದುರೊಂದು ರಿಟ್ಸ್ ಕಾರು ಇತ್ತೆಂದೂ, ಅಂಗಡಿ ಶೆಟರ್ ಒಡೆದಿತ್ತೆನ್ನಲಾಗಿದೆ.


ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದರು. ಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರುನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದುಕೊಂಡರು. ವಿಚಾರಿಸಿದಾಗ ಇಬ್ಬರೂ ಬಂಟ್ವಾಳದ ಸಜೀಪ ಮೂಲದವರು ಎಂದು ಪರಿಚಯ ಹೇಳಿದರೆನ್ನಲಾಗಿದೆ.


ಬಾಡಿಗೆ ಕಾರಿನಲ್ಲಿ ಬಂದು ಈ ಕೃತ್ಯದಲ್ಲಿ ತೊಡಗಿದ್ದಾರೆಂದು ತಿಳಿದುಬಂದಿದೆ.ಕನಕಮಜಲಿನಲ್ಲಿ ಅಂಗಡಿ ಕಳ್ಳತನಕ್ಕೂ ಮೊದಲು ಇವರಿಬ್ಬರೂ ಕಾವಿನಲ್ಲಿಯೂ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಬಂದಿದ್ದರು ಎನ್ನಲಾಗಿದೆ. ಇಬ್ಬರು ಕಳ್ಳರನ್ನು ಪೋಲೀಸರಿಗೆ ಒಪ್ಪಿಸಿದರೆಂದು ತಿಳಿದುಬಂದಿದೆ.


ಕನಕಮಜಲು ಪರಿಸರದಲ್ಲಿ ಇತ್ತೀಚಿನ ಕೆಲ ವರ್ಷದಿಂದ ಕೆಲವು ಕಳವು ಪ್ರಕರಣ ನಡೆದಿತ್ತು. ಅದೆಲ್ಲವೂ ಇದುವರೆಗೆ ಪತ್ತೆಯಾಗಿರಲಿಲ್ಲ. ಇದೀಗ ರೆಡ್ ಹ್ಯಾಂಡಾಗಿ ಊರವರೇ ಸೇರಿ ಕಳ್ಳನನ್ನು ಹಿಡಿದಿದ್ದಾರೆ.