ಕಡಬ ಟೈಮ್, ಪ್ರಮುಖ ಸುದ್ದಿ : ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ. ಅಲ್ಲಲ್ಲಿ ಕಳ್ಳತನ, ವಂಚನೆ ದೂರುಗಳು ಕೇಳಿಬರುತ್ತಿವೆ. ಇದೀಗ ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವರಿಂದ ಹಣ ಪಡೆದ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಯೊಬ್ಬರನ್ನು ಬೈಕ್ ನಲ್ಲಿ ಕರೆದೊಯ್ದು ಅರ್ಧ ದಾರಿಯಲ್ಲೇ ಬಿಟ್ಟು ಹೋಗಿ ವಂಚಿಸಿದ ಘಟನೆ ಫೆ. 11 ಎಡಮಂಗಲದಲ್ಲಿ ನಡೆದಿದೆ.


ಗ್ರಾಮದ ನಿವಾಸಿಗಳಿಗೆ ವಂಚಿದ ವ್ಯಕ್ತಿಯು ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸರೆಯಾಗಿದೆ. ಎಡಮಂಗಲದ ಹಿರಿಯ ವ್ಯಕ್ತಿಯೊಬ್ಬರು ಮಹಾಕಾಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ವ್ಯಕ್ತಿ “ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ” ಎಂದು ನಂಬಿಸಿದ್ದ . ತುಳುವರ ಕೆಡ್ದಸವೂ ಆಗಿರುವ ಕಾರಣ ಮತ್ತು ಕೆ.ಜಿ ಗೆ 300 ರೂ ಎಂದಿದ್ದರಿಂದ ಹಿರಿಯ ವ್ಯಕ್ತಿ ಆತನ ಬೈಕ್ ನಲ್ಲಿ ಹೋಗಿ ಎಂ.ಎಸ್.ಎಲ್ ಶಾಪ್ ಬಳಿಯ ಇತರ ವ್ಯಕ್ತಿಗಳ ಬಳಿಯೂ ತಿಳಿಸಿದಾಗ ಅವರೂ ಮಾಂಸ ಬೇಕು ಹೇಳಿದ್ದು ಅವರಿಂದಲೂ ಸಾವಿರಾರೂ ರೂ ಹಣ ಸಂಗ್ರಹಿಸಿ ಆತನಿಗೆ ನೀಡಿದ್ದರು.


ಆ ಬಳಿಕ ಎಡಮಂಗಲ- ಕಡಬ ಸಂಪರ್ಕಿಸುವ ಪಲೋಲಿ ಸೇತುವೆ ದಾಟಿ ಮುಂದಕ್ಕೆ ಆ ಹಿರಿಯ ವ್ಯಕ್ತಿಯನ್ನು ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ಹೋದಾತ ಬರಲೇ ಇಲ್ಲ. ಇತ್ತ ಎಡಮಂಗಲದಲ್ಲಿ ಮಾಂಸಕ್ಕಾಗಿ ಕಾಯುತ್ತಿದ್ದವರು ಹಿರಿಯ ವ್ಯಕ್ತಿಯನ್ನು ತಡವಾಗಿ ವಿಚಾರಿಸಿದಾದ ಮೋಸ ಹೋಗಿರುವುದು ಗೊತ್ತಾಗಿದೆ. ಈ ಅಪರಿಚಿತ ಆಲಂಕಾರು ,ಮರ್ದಾಳ ಪರಿಸರದಲ್ಲೂ ವಂಚಿಸಿರುವ ಸುದ್ದಿಗಳು ಬಂದಿದೆ.


ಹಣ ಪಡೆದು ಮೋಸ ಮಾಡಿದಾತನನ್ನು ಗ್ರಾಮದ ಕೆಲವರು ಆತನ ಚಹರೆ ಪತ್ತೆ ಹಚ್ಚಲು ಮುಂದಾಗಿದ್ದು ಇದರ ಭಾಗವಾಗಿ ಸಿಸಿ ಟಿವಿ ದೃಶ್ಯ ಸಂಗ್ರಹಿಸಿದ್ದಾರೆ. ಆತನ ವಾಹನ ನಂಬರ್ ನಕಲಿ ಎಂದು ಹೇಳಲಾಗುತ್ತಿದ್ದು ಪೊಲೀಸರು ಪೇಟೆಯಲ್ಲಿರುವ ಸಿಸಿಟಿವಿ ನೋಡಿದರೆ ಆತನ ಸುಳಿವು ಸಿಗಬಹುದೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಸಿ ಟಿವಿ ದೃಶ್ಯ ಇಲ್ಲಿದೆ:

