ಕಡಬ:
ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್
ಸವಾರ ಗಾಯಗೊಂಡ ಘಟನೆ
ಮತ್ತು ಸ್ಕೂಟಿಯ ಮೇಲೆ ಭಾರೀ ಗಾತ್ರದ ಹಾಲುಮಡ್ಡಿ ಮರ ಬಿದ್ದು ಸ್ಕೂಟಿ
ಸವಾರ ಮೃತಪಟ್ಟ ಘಟನೆಯ ನಂತರ ಅರಣ್ಯ ಇಲಾಖೆ ಕಾಲಹರಣ
ಮಾಡುತ್ತಿರುವ ಆರೋಪ ಕೇಳಿ ಬಂದಿದೆ.




ಸುಬ್ರಹ್ಮಣ್ಯದಿಂದ
ಮರ್ದಾಳದವರೆಗೆ , ಕಡಬದಿಂದ ಪಂಜ ತನಕ ರಸ್ತೆ ಬದಿಯಲ್ಲಿರುವ ಹಾಲು ಮಡ್ಡಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಇನ್ನಷ್ಟು
ಜೀವ ಬಲಿ ತೆಗೆದುಕೊಳ್ಳಲು ಕಾಯುವಂತಿದೆ. ಅರಣ್ಯ
ಇಲಾಖೆಯವರು ದುರ್ಘಟನೆಗಳು ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಜಾಯಿಸಿಕೆ ನೀಡಿ ಸಾರ್ವಜನಿಕರು ಪ್ರತಿಭಟಿಸದಂತೆ
ಭರವಸೆಗಳನ್ನು ನೀಡಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.
ರಸ್ತೆ
ಬದಿಯಲ್ಲಿ ಅಪಾಯಕಾರಿ ಹಾಲು ಮಡ್ಡಿ ಮರಗಳಿವೆ ಅದನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ ಸಾರ್ವಜನಿಕರು ಕೇಳಿಕೊಂಡರೂ ಇಲಾಖೆ ಎರಡು ಮೂರು ಮರಗಳನ್ನು ತೆರವುಗೊಳಿಸಿ ಕೈತೊಳೆದುಕೊಂಡಿರುವುದು ಬಿಟ್ಟರೆ ಉಳಿದ ಅಪಾಯಕಾರಿ ಹಾಲುಮಡ್ಡಿ ಮರಗಳನ್ನು ತೆರವು ಮಾಡದೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆಕ್ರೋಶ ನಾಗರಿಕ ವಲಯದಿಂದ ವ್ಯಕ್ತವಾಗುತ್ತಿದೆ.


ಹಾಲು
ಮಡ್ಡಿ ಮರ ಅಪಾಯಕಾರಿಯಾಗಿಲ್ಲ ಎಂದು ವರದಿ ನೀಡಿದ
ಅರಣ್ಯ ಇಲಾಖೆ: ಈ ಹಿಂದೆ ಸಂಭವಿಸಿದ್ದ
ಸೀತಾರಾಮ
ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪಂಜ ವಲಯ ಅರಣ್ಯ ಕಛೇರಿಯಿಂದ ಕಂದಾಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದ್ದು, ಹಾಲು ಮಡ್ಡಿ ಮರ ಅಪಾಯಕಾರಿಯಾಗಿಲ್ಲ ಅಲ್ಲದೆ ಬೀಳುವ
ಸ್ಥಿತಿಯಲ್ಲಿರಲಿಲ್ಲ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿ ವರದಿಗಳನ್ನು ನೀಡಿದೆ. ಈ
ವರದಿ ಪರಿಣಾಮ ಮೃತ ಸೀತಾರಾಮ ಅವರ ಕುಟುಂಬ ಪರಿಹಾರದಿಂದ ವಂಚಿತರಾಗಿದ್ದಾರೆ.
ಜೀವಕ್ಕೆ
ಅಪಾಯವಾಗುತ್ತಿರುವ ಹಾಲುಮಡ್ಡಿ ಮರಗಳು: ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾಗೂ ಕಡಬ-ಪಂಜ ಮುಖ್ಯರಸ್ತೆಯ ಬದಿಯಲ್ಲಿರುವ ಮೇಣ ತೆಗೆದು ಬುಡ ಶಿಥಿಲಗೊಂಡ ಅಪಾಯಕಾರಿ ಹಾಲುಮಡ್ಡಿ ಮರಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಗೆ ಅಗ್ರಹಿಸುತ್ತಲೇ ಬಂದಿದ್ದಾರೆ. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಹಾಲು ಮಡ್ಡಿ ಮರಗಳನ್ನು ತೆರವುಗೊಳಿಸಬೇಕು ಮುಂದಕ್ಕೆ ರಸ್ತೆ ಪಕ್ಕದ ಹಾಲುಮಡ್ಡಿ ಮರಗಳಿಂದ ಮೇಣ ತೆಗೆಯಲು (ಟ್ಯಾಪಿಂಗ್) ಅವಕಾಶ ನೀಡಬಾರದು ಎಂದು ಗ್ರಾಮ ಸಭೆಗಳಲ್ಲಿ ಅಗ್ರಹಿಸಿದರೂ ಅರಣ್ಯ ಇಲಾಖೆಯವರು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೇ ಇರುವುದರಿಂದ ಈಗ ಅಮಾಯಕ ಜೀವಗಳು
ಬಲಿಯಾಗುವಂತಾಗಿದೆ.


ಕೆಲವು
ವರ್ಷಗಳ ಹಿಂದೆ ಐತ್ತೂರಿನ ಬಜಕೆರೆ ಸೇತುವೆ ಬಳಿಯೂ ಮರ ಬಿದ್ದು ಕಲ್ಲಾಜೆಯ
ಯುವಕನೊಬ್ಬ ಮೃತಪಟ್ಟಿದ್ದರು. ಪ್ರತಿ ವರ್ಷ ಮಳೆಗಾಲದಲ್ಲಿ ಹಾಲುಮಡ್ಡಿ ಮರಗಳು ವಿದ್ಯುತ್ ಲೈನ್ ಮೇಲೆ ಮುರಿದುಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗುವುದು, ಅಂಗಡಿಗಳು, ವಾಹನಗಳು ಹಾನಿಗೀಡಾಗುವುದು ಮಾತ್ರವಲ್ಲದೇ ವಿದ್ಯುತ್ ಕಂಬಗಳು ಮುರಿದು ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಆದರೂ ಅರಣ್ಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮರ ಬಿದ್ದು ಇನ್ನಷ್ಟು
ಜೀವ ಬಲಿಯಾಗುವ ಮೊದಲು ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.