ಕಡಬ ಟೈಮ್,ಸುಬ್ರಹ್ಮಣ್ಯ: ವಿದ್ಯಾರ್ಥಿನಿಯೊಡನೆ ಬಸ್ಸಿನಲ್ಲಿ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದಂತೆ ಆರೋಪಿತ ಯುವಕನಿಗೆ ಪೈಚಾರಿನಲ್ಲಿ ಬಸ್ಸಿನಿಂದ ಇಳಿಸಿ ಕಾರಿನಲ್ಲಿ ಸುಳ್ಯ ಬಸ್ ನಿಲ್ದಾಣದವರೆಗೆ ಕರೆತಂದು ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಐವರು ಯುವಕರ ಮೇಲೆ ಸುಳ್ಯ ಪೋಲೀಸರು ದಾಖಲಿಸಿರುವ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.




2024ರ ಸೆ. 23ರಂದು ಬೆಳಗ್ಗೆ ಸಕಲೇಶಪುರದ ಕೂಡುರಸ್ತೆ ಎಂಬಲ್ಲಿಂದ ಸುಳ್ಯದಲ್ಲಿರುವ ಕಾಲೇಜಿಗೆ ಬೆಂಗಳೂರು-ಸುಬ್ರಹ್ಮಣ್ಯ-ಸುಳ್ಯ ಬಸ್ಸಲ್ಲಿ ವಿದ್ಯಾರ್ಥಿನಿ ಹೊರಟಿದ್ದಳು. ಬಸ್ಸು ಕುಲ್ಕುಂದ ಸಮೀಪ ತಲಪುವಾಗ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಂಜೇಶ್ವರದ ನಿಯಾಜ್ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿತ್ತು.


ಈ ವಿಷಯ ತಿಳಿದ ಆಕೆ ಕಲಿಯುತ್ತಿದ್ದ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಮತ್ತು ಹಿಂದೂ ಸಂಘಟನೆಯ ಕೆಲ ಯುವಕರು ಸೇರಿ, ಆತ ಸುಬ್ರಹ್ಮಣ್ಯದಿಂದ ಬೇರೊಂದು ಬಸ್ಸಿನಲ್ಲಿ ಬರುತ್ತಿರುವುದನ್ನು ತಿಳಿದು ಪೈಚಾರಿನಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಕಾರಿನಲ್ಲಿ ಕೂರಿಸಿಕೊಂಡು ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಿತ್, ಮಿಥುನ್, ಸುಶ್ಮಿತ್, ಹರ್ಷಿತ್ ಮತ್ತು ವಿಜೇತ್ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

