ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ (58)ರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.




ದೇಶಾದ್ಯಂತ ಸಂಚಲನ ಮೂಡಿಸಿದ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಕಾಡಂಚಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಬರ್ಬರವಾಗಿ ಹತ್ಯೆಯಾದ ಉಜಿರೆಯ ಕಾಲೇಜೊಂದರ ವಿದ್ಯಾರ್ಥಿನಿ ಸೌಜನ್ಯಳ ತಂದೆ.
ಸೌಜನ್ಯಳ ಕೊಲೆ ಪ್ರಕರಣ ನಡೆದು 12 ವರ್ಷ ಗತಿಸಿದರೂ, ಈ ಪ್ರಕರಣದ ಕುರಿತು ಸಿಬಿಐನ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದರೂ, ಕುಟುಂಬದ ಕಡೆಯಿಂದ ಕಾನೂನು ಹೋರಾಟ ಮುಂದುವರಿದಿತ್ತು


ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದವರು ಹಾಗೂ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ದಾಖಲಿಸುವ ಮೂಲಕ ಸೌಜನ್ಯ ಕುಟುಂಬದ ಪರವಾಗಿ ಚಂದಪ್ಪ ಗೌಡರು ಕಾನೂನು ಹೋರಾಟ ನಡೆಸುತ್ತಿದರು.
ಚಂದಪ್ಪ ಗೌಡರವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದು, ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.


ಮೃತರು ತಂದೆ ಪೊಣಿ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಸೌಮ್ಯ , ಸೌಂದರ್ಯ, ಸೌವರ್ಧ, ಜಯರಾಮರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಇಂದು ರಾತ್ರಿ 7.30ಕ್ಕೆ ಪಾಂಗಾಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.