ಕಡಬ: ಕಡಬ -ಪಂಜ ರಸ್ತೆಯಲ್ಲಿ ಸ್ಕೂಟಿ ಸವಾರನ ಮೇಲೆ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ನ.2ರ ಶನಿವಾರ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದ್ದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡದ ಕಾರಣ ಕಡಬ -ಪಂಜ ರಸ್ತೆಯಲ್ಲಿ ಸುಮಾರು ಎರಡೂವರೆ ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರನ್ನು ಮನವೊಲಿಸಿ ವಾರದೊಳಗೆ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮೃತ ವ್ಯಕ್ತಿಗೆ ಸರಕಾರದಿಂದ ಪರಿಹಾರ ಒದಗಿಸಲು ಪೂರಕ ವರದಿ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.
ಕಡಬ ಎಸ್.ಐ. ಅಭಿನಂದನ್ ಎಂ.ಎಸ್. ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳು ಹಾಜರಿದ್ದರು. ಸ್ಥಳೀಯ ಮುಂದಾಳುಗಳಾದ ಕೃಷ್ಣ ಶೆಟ್ಟಿ ಕಡಬ, ಫಝಲ್ ಕೋಡಿಂಬಾಳ, ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಸೀತಾರಾಮ ಗೌಡ ಕೆ., ಅನೀಶ್ ಲೋಬೊ, ಬಾಲಕೃಷ್ಣ ಡಿ. ಕೆ., ಜಯಂತ ಕೆ., ಕೇಶವ ಬೇರಿಕೆ, ರಾಮಣ್ಣ ಜಾಲ್ತಾರು, ಮೋಹನ ಕೋಡಿoಬಾಳ ಮುಂತಾದವರು ಪಕ್ಷಬೇಧ ಮರೆತು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.