ಕಡಬ ಟೈಮ್ಸ್ (KADABA TIMES): ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಆಯ ತಪ್ಪಿ ಬಿದ್ದು ಸುಮಾರು 15 ತಾಸುಗಳ ಬಳಿಕ ಪತ್ತೆಯಾದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.


ಮಾ.25ರಂದು ರೈಲಿನಲ್ಲಿ ಕುಮಟದಿಂದ ಮಂಗಳೂರು ಮಾರ್ಗ ವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯ ಕುಮಾರ್ ರಾತ್ರಿ 11 ಗಂಟೆ ವೇಳೆಗೆ ಮಂಗಳೂರು-ಬೆಂಗಳೂರು ರೈಲು ಮಾರ್ಗ ಹಾದು ಹೋಗಿರುವ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಬಿದ್ದಿದ್ದಾರೆ.


ಬಿದ್ದ ಸ್ಥಳದಿಂದ 25 ಅಡಿಗಳಷ್ಟು ಕೆಳಭಾಗಕ್ಕೆ ಜಾರಿಗೊಂಡು ಹೋಗಿದ್ದ ಯುವಕ ಅಲ್ಲಿ ಮೋರಿಯ ಪಕ್ಕ ಮಲಗಿದ ಸ್ಥಿತಿಯಲ್ಲೇ ಬಾಕಿಯಾಗಿದ್ದರು. ರಾತ್ರಿ ವೇಳೆ ಯುವಕ ರೈಲಿನಿಂದ ಬೀಳುವುದನ್ನು ಸಹ ಪ್ರಯಾಣಿಕರು ಗಮನಿಸಿದ್ದು, ನೆಟ್ಟಣ ತಲುಪಿದ ವೇಳೆ ರೈಲ್ವೇ ಮಾಸ್ಟರ್ ಗಮನಕ್ಕೆ ತಂದಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಪತ್ತೆ ಕಾರ್ಯವೂ ತಡವಾಗಿತ್ತು.


ಮಾ.26ರಂದು ಸುಣ್ಣಾಜೆ ಬಳಿ ಕೊಳವೆಬಾವಿಯ ಪಂಪ್ ಎಳೆಯಲು ಹೋಗಿದ್ದವರಿಗೆ ಮೋರಿ ಸಮೀಪ ವ್ಯಕ್ತಿ ನರಳುವುದು ಕೇಳಿಸಿತು. ತತ್ಕ್ಷಣ ಈ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸಚಿನ್ ಸವಣೂರು ಅವರ ಗಮನಕ್ಕೆ ತಂದಿದ್ದು ಅವರು ಯುವಕನನ್ನು ಪತ್ತೆಹಚ್ಚಿ ಆರೈಕೆ ಮಾಡಿ ವಿಚಾರಿಸಿದಾಗ, ಆತ ಕುಮಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಗ್ಗೆ ತಿಳಿಯಿತು.


ಪೊಲೀಸರ ಸೂಚನೆಯಂತೆ ಯುವಕನನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮುಖ ಹಾಗೂ ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.