

![]() ![]() |
ಆಸ್ಪತ್ರೆಗೆ ದಾಖಲಾಗಿರುವ ಕಿಶೋರ್ ಉಚ್ಚಿಲ |


ದಕ್ಷಿಣ ಕನ್ನಡ :ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ, ಮರಳು ದಂಧೆಯ ಆರೋಪಿ ವ್ಯಕ್ತಿಯೊಬ್ಬರಿಗೆ
ರಾಡ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ಹೊರ ವಲಯದ ಸೋಮೇಶ್ವರ ಪುರಸಭೆ ಕಚೇರಿ ಸಮೀಪಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ.
ಸೋಮೇಶ್ವರ ಉಚ್ಚಿಲದ,ಫಿಶರೀಶ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಮ್ ಉಚ್ಚಿಲ ಹಲ್ಲೆಗೊಳಗಾದ ವ್ಯಕ್ತಿ.
ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸುನಿಲ್ ಪೂಜಾರಿ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ. ಕಿಶೋರ್ ಅವರು ಸೋಮವಾರ ಬೆಳಿಗ್ಗೆ ತನ್ನ ಸ್ನೇಹಿತನ
ಜೊತೆ ಸೋಮೇಶ್ವರದ ಹೊಟೇಲಿನಲ್ಲಿ ಚಹಾ ಕುಡಿದು ಸ್ಕೂಟರಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಸಮೀಪದಲ್ಲಿ ಆರೋಪಿ ತಡೆದಿದ್ದಾನೆ.


ಮರಳುಗಾರಿಕೆಯ ಬಗ್ಗೆ ಭಾರೀ ಪೊಲೀಸರಿಗೆ ಮಾಹಿತಿ ನೀಡುತ್ತೀಯ, ನಿಮ್ಮಂತಹವರು ಜೀವವಿದ್ದರೆ ನಮ್ಮಂತವರಿಗೆ ಉಳಿಗಾಲವಿಲ್ಲ ಎಂದು
ದಬಾಯಿಸಿ ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದು,ಬಳಿಕ ಸೊಂಟದಿಂದ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದಾನೆ . ಈ ವೇಳೆ ಸ್ನೇಹಿತ ಪುಷ್ಪರಾಜ್ ಅವರು ಸ್ಕೂಟರನ್ನು ವೇಗವಾಗಿ ಚಲಾಯಿಸಿದರ ಪರಿಣಾಮ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹಲ್ಲೆಗೊಳಗಾದ ಕಿಶೋರ್ ಆರೋಪಿಸಿದ್ದಾರೆ.
ಉಚ್ಚಿಲ ಬಟ್ಟಂಪಾಡಿ ಪ್ರದೇಶದಲ್ಲಿ ತಿಂಗಳುಗಳ ಹಿಂದಷ್ಟೆ ಸಿಸಿಬಿ ಪೊಲೀಸರು ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ವಶಪಡಿಸಿದ್ದರು. ಆ ಪ್ರಕರಣದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸುನಿಲ್ ಪೂಜಾರಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಹಲ್ಲೆಗೊಳಗಾದ ಕಿಶೋರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಈತನ
ವಿರುದ್ದ ಈಗಾಗಲೇ ಎರಡು ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿದ್ದು, ಇದೀಗ ಮೂರನೇ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದಷ್ಠೇ ಕೆಥೋಲಿಕ್ ಮಹಾಸಭಾ ಮುಖಂಡ, ಆಲ್ವಿನ್ ಡಿಸೋಜ ವಿರುದ್ಧ ಅಡ್ಯಾರು ಸಮೀಪ ಮರಳು ಮಾಫಿಯಾ ದವರಿಂದ ಹಲ್ಲೆ ನಡೆದಿತ್ತು. ಪ್ರತಿಭಟನೆ ಹಲ್ಲೆ ಬಳಿಕ ಕೆಲ ದಿನಗಳ ಕಾಲ ಮರಳುಗಾರಿಕೆ ಸ್ಥಗಿತಗೊಂಡಿತ್ತಾದರೂ, ಇದೀಗ ತಡರಾತ್ರಿ 11
ರ ನಂತರ ಉಳ್ಳಾಲ ತಾಲೂಕಿನ ಎಲ್ಲಾ ರಸ್ತೆಗಳಲ್ಲಿಯೂ ಮರಳು ಹೊತ್ತ ಟಿಪ್ಪರ್ ಲಾರಿಗಳ ಅಟ್ಟಹಾಸ ಮುಂದುವರಿದಿದೆ.

