KADABA TIMES(ಕಡಬ ಟೈಮ್ಸ್): ಸುಬ್ರಹ್ಮಣ್ಯ: ಕಾಡು ಹಂದಿಯ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಎ.15 ರಂದು ಕುಲ್ಕುಂದದಲ್ಲಿ ನಡೆದಿದೆ.


ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನೂ ಓದಿರಿ:ಕಡಬ:ತಾಲೂಕು ಆಡಳಿತ ಸೌಧದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ


ಪೊಲೀಸರ ವಿಚಾರಣೆ ಈತ ಕಡಬ ತಾಲೂಕಿನ ಮರ್ದಾಳದ ವ್ಯಕ್ತಿ ಎಂದು ತಿಳಿದು ಬಂದಿದ್ದು ಹಲವರಿಗೆ ವಿವಿಧ ರೀತಿಯಲ್ಲಿ ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಬಿಟ್ಟಿರುವುದಾಗಿ ಸುಬ್ರಹ್ಮಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ . ಈತ ಕಟ್ಟಿಗೆ ಇದೆ ಎಂದು ಹೇಳಿ ಕುಲ್ಕುಂದ ಭಾಗದಲ್ಲಿಯೂ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ.
ಸದ್ಯ ಈತನ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಹಂಚಿಕೊಂಡು ಮೋಸ ಹೋಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ ಎಡಮಂಗಲದಲ್ಲಿ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು “ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ ಹಣ ಪಡೆದು ಹಿರಿಯ ವ್ಯಕ್ತಿಯನ್ನು ಪಾಲೋಲಿ ಸೇತುವೆ ಬಳಿ ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ವಂಚಿಸಿದ್ದ. ವಂಚಿಸಿದ ವ್ಯಕ್ತಿತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ.