KADABA TIMES( ಕಡಬ ಟೈಮ್ಸ್) : ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ.ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹೇಳಿದರು.


ಅವರು ತಾಲೂಕು ಆಡಳಿತ,ತಾ.ಪಂ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಆಡಳಿತದ ಸಂಭಾಗಣದಲ್ಲಿ ಜರುಗಿದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ|ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು ಎಂದರು.


ದಲಿತ ಮುಖಂಡ ಶಶಿಧರ ಬೊಟ್ಟಡ್ಕ ಅವರು ಮಾತನಾಡಿ, ಭಾರತದ ಪ್ರತಿ ಪ್ರಜೆಯೂ ಸಹ ಅಂಬೇಡ್ಕರ್ ಅವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನವೆಂದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಅಂಬೇಡ್ಕರ್ ರವರು ನೀಡಿದ ಅದ್ಭುತ ಸಂದೇಶಗಳು, ಇಂದಿಗೂ ಸಹ ಸದಾ ಜನಜನಿತವಾಗಿವೆ. ಅವರ ಸಂದೇಶಗಳನ್ನು ಪಾಲಿಸುವ ಪ್ರತಿ ಪ್ರಜೆಯೂ ಜೀವನದಲ್ಲಿ ಎಂದೂ ಕುಗ್ಗಲಾರ ಎಂದರು. ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.


ಹಲವು ಅಧಿಕಾರಿಗಳು, ಸಿಬ್ಬಂದಿಗಳು ಬರಲೇ ಇಲ್ಲ: ಇನ್ನು ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಟ್ಟಣ ಪಂಚಾಯತ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಾರದಿರುವುದನ್ನು ದಲಿತ ಮುಖಂಡರುಗಳು ಪ್ರಶ್ನಿಸಿ ಪಾಲ್ಗೊಳ್ಳದ ಅಧಿಕಾರಿ,ಸಿಬ್ಬಂದಿಗಳಿಗೆ ನೋಟಿಸಿ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು. ಇದಕ್ಕೆ ಪ್ರತ್ಯುತ್ತರಿಸಿದ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಕೆಲವರು ರಜೆ ನಿಮಿತ್ತ ಊರಿಗೆ ಹೋಗಿದ್ದಾರೆ, ಇನ್ನು ಕೆಲವರು ಭಾಗವಹಿಸಿಲ್ಲ ಇದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು. ಅಲ್ಲದೆ ತಹಶೀಲ್ದಾರ್ ಗ್ರೆಡ್ 2 ಕಚೇರಿಯಲ್ಲಿ ಸಿಬ್ಬಂದಿಗಳು ಕೆಲಸ ನಿರತರಾಗಿದ್ದು ಕಾರ್ಯಕ್ರಮಕ್ಕೆ ಬಾರದಿರುವುದನ್ನು ಮುಖಂಡರೊಬ್ಬರು ಪ್ರಶ್ನಿಸಿದಾಗ ಸಿಬ್ಬಂದಿಗಳು ನಮಗೆ ಏನು ಗೊತ್ತಿಲ್ಲ ಎಂದು ಉತ್ತರಿಸಿದರು. ಈ ನಡುವೆ್ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಮುಖಂಡರುಗಳನ್ನು ಪ್ರತ್ಯೇಕವಾಗಿ ಕರೆದು ಮುಂದಿನ ಬಾರಿ ಪೂರ್ವಭಾವಿ ಸಭೆ ಕರೆದು ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಭರವಸೆ ನೀಡಿದರು.


ಕಡಬ ಉಪ ತಹಶೀಲ್ದಾರ್ ಶಾಯದುಲ್ಲಾ ಖಾನ್, ಸರ್ವೆ ಇಲಾಖೆಯ ಮೇಲ್ವಿಚಾರಕ ಚಂದ್ರಶೇಖರ ಮೂರ್ತಿ, ಕಡಬ ತಾ.ಪಂ. ವ್ಯವಸ್ಥಾಪಕ ಭುವನೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಕಡಬ ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಡಾ।ವೇದಾವತಿ, ದಲಿತಪರ ಸಂಘಟನೆಗಳ ಮುಖಂಡರಾದ ರಾಫುವ ಕಳಾರ, ಆನಂದ ಪದುಬೆಟ್ಟು , ವಸಂತ ಕುಬಲಾಡಿ,ಆನಂದ ಹೊಸಮಠ, ಹಾಗೂ ವಿವಿಧ ಇಲಾಖೆಗಳ ಸಿಬಂದಿಗಳು ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ಸಿಬಂದಿ ಕೌಶಿಕ್ ಕುಳ ಅವರು ಸ್ವಾಗತಿಸಿ, ವಂದಿಸಿದರು. ಉದಯಕುಮಾರ್ ಪಿ.ಆರ್. ನಿರೂಪಿಸಿದರು.